ಒಬ್ಬ ಸರಕಾರಿ ನೌಕರ ತನ್ನ ಸೇವಾವಧಿಯಲ್ಲಿ ಮೃತಪಟ್ಟರೆ, ಆ ಉದ್ಯೋಗಿಯ ಕುಟುಂಬಕ್ಕೆ ಸರಕಾರದಿಂದ ದೊರೆಯುವ ‘ಪಿಂಚಣಿ’ (ಪೆನ್ಷನ್) ಅದೊಂದು ಆದರ್ಶ ಉದ್ಯೋಗ ದಾತನೆಂಬುದನ್ನು ದೃಢೀಕರಿಸುತ್ತದೆ.ಆದರೆ ಕುಟುಂಬದ ಗಾತ್ರ ಮತ್ತು ಆರ್ಥಿಕ ಪರಿಸ್ಥಿತಿಗನುಗುಣವಾಗಿ,ಕೆಲವೊಮ್ಮೆ,ಕೇವಲ ಪಿಂಚಣಿಯಿಂದ ಅವರ ಜೀವನ ಸಾಗುವುದು ದುಸ್ತರವಾಗಬಹುದು.ಈ ಅಂಶವನ್ನು ಪರಿಗಣಿಸಿ ಆ ಕುಟುಂಬದ ರಕ್ಷಣೆಗೆ ಬರುವ ನಿಯಮವೇ ‘ಅನುಕಂಪಾಧಾರಿತ ನೇಮಕಾತಿ’ (ಕಂಪೇಷನೇಟ್ ಅಪಾಯಿಂಟ್ಮೆಂಟ್).ಈ ನಿಯಮದ ಷರತ್ತುಗಳು ಕೇಂದ್ರ ಮತ್ತು ರಾಜ್ಯ ಸರ ಕಾರಗಳಡಿ ಸ್ವಲ್ಪ ಭಿನ್ನವಾಗಿರಬಹುದಾ ದರೂ ಅವುಗಳ ಮೂಲ ಉದ್ದೇಶ ಒಂದೇ.ಅದೆಂದರೆ, ಮೃತಪಟ್ಟ ಉದ್ಯೋಗಿಯ ಕುಟುಂಬದ ಆರ್ಥಿಕ ಬಿಕ್ಕಟ್ಟನ್ನು ಮೃದುವಾಗಿಸಲು ಸಹಕರಿಸುವುದು.ಕೇಂದ್ರ ಸರಕಾರಿ ನೌಕರರಿಗೆ ಅನ್ವಯವಾಗುವಂತೆ,ಈ ನಿಯಮದಡಿ, ನೌಕರನ ಮರಣಾನಂತರ (ಇದರಲ್ಲಿ ಆತ್ಮಹತ್ಯೆಯೂ ಸೇರಿದೆ), ಆತನ ಕುಟುಂಬದ ‘ಆಶ್ರಿತ ಮತ್ತು ಅರ್ಹ’ (ಡಿಪೆಂಡೆಂಟ್ ಆಂಡ್ ಎಲಿಜಿಬಲ್) ಸದಸ್ಯನಿ/ಳಿಗೆ ಉದ್ಯೋಗ ದೊರಕಬಹುದು.ಇಲ್ಲಿ ‘ಆಶ್ರಿತ’ರೆಂದರೆ, ಮೃತ ನೌಕರನ/ಳ, (1) ಹೆಂಡತಿ/ಗಂಡ; (2) ಮಗ/ಳು; ಮತ್ತು (3) ಮೃತಪಟ್ಟ ಉದ್ಯೋಗಿ ಅವಿವಾಹಿತ/ತೆಯಾಗಿದ್ದಲ್ಲಿ,ಆತನ/ಆಕೆಯ ಸಹೋದರ/ರಿ.ಈ ಆಶ್ರಿತರಲ್ಲಿ ಯಾರಾದರೊಬ್ಬರಿಗೆ, ಕೆಲವು ಷರತ್ತುಗಳ ಪರಿಧಿಯಲ್ಲಿ, ನೌಕರಿ ದೊರೆ ಯುವ ಅವಕಾಶವಿದೆ.
ಮುಖ್ಯ ಷರತ್ತುಗಳು : (1)ಇದು ‘ನೇರ ನೇಮಕಾತಿ’ (ಡೈರಕ್ಟ್ ರಿಕ್ರೂಟ್ ಮೆಂಟ್)ಗೆ ಮಾತ್ರ ಸೀಮಿತವಾಗಿರಬೇಕು ಮತ್ತು ನೇರ ನೇಮಕಾತಿಯ ಖಾಲಿ ಹುದ್ದೆಗಳ 5%ನ್ನು ಮೀರಬಾರದು; (ಸರಕಾರಿ ಉದ್ಯೋಗದಲ್ಲಿ, ವಿವಿಧ ರೀತಿಯ ನೇಮಕಾತಿಗಳಿವೆ (ಉದಾ:ಪದೋನ್ನತಿ - ಪ್ರಮೋಷನ್), ಮತ್ತು ಪ್ರತಿ ನೇಮಕಾತಿಗೆ ನಿರ್ದಿಷ್ಟ ‘ಪಾಲು’ (ಕೋಟಾ) ಇದೆ. ಯಾವುದೇ ನೇಮಕಾತಿ ಈ ಪಾಲನ್ನು ಮೀರುವಂತಿಲ್ಲ.
ಆದರೆ ನೌಕರಿಗೆ ಮೊದಲಪ್ರವೇಶ ದೊರೆಯುವುದು ನೇರ ನೇಮಕಾತಿಯಿಂದ ಮಾತ್ರ;(2)ಹುದ್ದೆ ಖಾಲಿ ಇರದಿದ್ದಲ್ಲಿ,ಈ ನೇಮಕಾತಿಯನ್ನು ಮಾಡುವಂತಿಲ್ಲ;(3)ಸಂದರ್ಭೋಚಿತವಾಗಿ,ಆಶ್ರಿತ ಉದ್ಯೋಗಾಂಕ್ಷಿಗೆ,ಹುದ್ದೆಯ ಗರಿಷ್ಠ ವಯೋಮಿತಿಗೆ ವಿನಾಯತಿ ನೀಡಬಹುದಾದರೂ,ಕನಿಷ್ಠ ವಯೋಮಿತಿ (18ವರ್ಷ)ಯಿಂದ ಯಾವುದೇ ರಿಯಾಯಿತಿಯಿಲ್ಲ ;(4) ಈ ನೇಮಕಾತಿ ಗ್ರೂಪ್ ‘ಸಿ’ಗೆ ಮಾತ್ರ ಅನ್ವಯ ವಾಗುತ್ತದೆ (ಮೊದಲು ಇದು ಗ್ರೂಪ್ ‘ಡಿ’ಗೂ ಅನ್ವಯಿಸುತ್ತಿತ್ತು); (5) ನೇಮಿತ ಉದ್ಯೋಗಿಯ ವರ್ಗಕ್ಕನುಗುಣವಾಗಿ, ಆತನನ್ನು/ ಆಕೆಯನ್ನು ಎಸ್ಸಿ/ ಎಸ್ಟಿ/ ಒಬಿಸಿ/ ಜನರಲ್ ಎಂದು ಪರಿ ಗಣಿಸಬೇಕು; ಮತ್ತು (6) ಉದ್ಯೋಗಿ ಮರಣಿ ಸಿದ ಮೂರು ವರ್ಷಗಳೊಳಗಾಗಿ ಈ ನೇಮ ಕಾತಿ ಸಾಧ್ಯವಾಗದಿದ್ದರೆ, ಆ ಕುಟುಂಬದ ಆಶ್ರಿತ ರಿಗೆ ಈ ನಿಯಮದಡಿ ನೌಕರಿ ಸಿಗಲಾರದು.
ಅನುಕಂಪಾಧಾರಿತ ನೇಮಕಾತಿ, ನೇಮ ಕಾತಿಯ ಸಾಮಾನ್ಯ ಬದ್ಧತೆಗಳಿಗೆ ಅಪವಾದವಾಗಿ ಹುಟ್ಟಿದ ನಿಯಮ. ಆಶ್ರಿತ ಉದ್ಯೋಗಾಕಾಂಕ್ಷಿಗೆ 18 ವರ್ಷ ತುಂಬಿದ್ದು ಇತರ ಅರ್ಹತೆಗಳಿಂದ ದೂರವಿದ್ದರೂ (ಉದಾ: ಟೈಪಿಂಗ್, ಕಂಪ್ಯೂ ಟರ್ ಬಳಕೆ, ಇತ್ಯಾದಿ), ಆ ಕೊರತೆಯನ್ನು ತುಂಬಲು ಸಾಕಷ್ಟು ಸಮಯಾವಕಾಶ ಮತ್ತು ತರಬೇತಿಯನ್ನು ಸಂಬಂಧಿತ ಇಲಾಖೆ ನೀಡು ತ್ತದೆ. ಅಲ್ಲದೆ, ಮೃತ ಉದ್ಯೋಗಿಯ ಪ್ರೊವಿ ಡೆಂಟ್ ಫಂಡ್, ಗ್ರಾಚ್ವಿಟಿ ಇತ್ಯಾದಿಗಳ ಮೊತ್ತ (ಕುಟುಂಬದ ಇತರ ತೊಡಕು ಪರಿಸ್ಥಿತಿಗಳನ್ನು ಕಡೆಗಣಿಸಿ) ಆಶ್ರಿತರಿಗೆ ಉದ್ಯೋಗಾವಕಾಶ ನೀಡಲು ಅಡ್ಡಿಯಾಗದು. ಮೊದಲೇ ಹೇಳಿ ದಂತೆ, ಈ ನೇಮಕಾತಿಯ ಹಿಂದಿರುವ ಉದ್ದೇಶ, ಮೃತ ಉದ್ಯೊಗಿಯ ಆಶ್ರಿತರ ರಕ್ಷಣೆ. ಇದು ಸರಕಾರ ತನ್ನ ಆಶ್ರಿತರನ್ನು ಪೋಷಿಸುವ ಮಾನವೀಯ ನಿಯಮವೆನ್ನಬಹುದು.
ಆದರೆ ಈ ನೇಮಕಾತಿಯು ಆಶ್ರಿತ ಉದ್ಯೋಗಾಕಾಂಕ್ಷಿಯ ಹಕ್ಕಲ್ಲ. ಅದು ಆಶ್ರಿತ ಕುಟುಂಬದ ಅನಿವಾರ್ಯತೆ ಮತ್ತು ನಿಯಮಗಳ ಹದ್ದುಬಸ್ತಿನಲ್ಲಿ ಮಾತ್ರ ಸಾಧ್ಯ. ಇದನ್ನು ನಮ್ಮ ಸರ್ವೋಚ್ಚ ನ್ಯಾಯಾಲಯ ಮೇ 2012ರ ತನ್ನ ತೀರ್ಪೊಂದರಲ್ಲಿ ಪುನರುಚ್ಚರಿಸಿದೆ. ಈ ನೇಮ ಕಾತಿಯನ್ನು ‘‘ಸಾಚಾ ಸಂದರ್ಭಗಳಲ್ಲಿ ನಿಯಮ ಬದ್ಧವಾಗಿ ಅನುಸರಿಸದ ಹೊರತು, ಇದು ಸಂವಿಧಾನದ ಅನುಚ್ಛೇದ 14 (ಕಾನೂನಿನ ಮುಂದೆ ಎಲ್ಲರೂ ಸಮಾನರು) ಮತ್ತು 16 (ಸಾರ್ವಜನಿಕ ವಲಯದ ಉದ್ಯೋಗದಲ್ಲಿ ಸರ್ವರಿಗೂ ಸಮಾನಾವಕಾಶ) ಇವನ್ನು ಉಲ್ಲಂಘಿಸುತ್ತದೆ’’ ಎಂದಿದೆ ನ್ಯಾಯಾಲಯ.
‘‘ಸಾರ್ವಜನಿಕ ಪ್ರಕಟಣೆಯ ಮೂಲಕ ಅರ್ಜಿ ಆಹ್ವಾನಿಸಿ, ಅದಕ್ಕೆ ಪ್ರತಿಯಾಗಿ ಸ್ವೀಕರಿ ಸಿದ ಅರ್ಜಿಗಳನ್ನು ಪರಿಗಣಿಸಿ, ಕೇವಲ ಯೋಗ್ಯ ತೆಯ ಆಧಾರದಲ್ಲಿ ಹುದ್ದೆಗಳನ್ನು ತುಂಬುವುದು ಸಾರ್ವಜನಿಕ ವಲಯದ ನೇಮಕಾತಿಯ, ಕಟ್ಟುನಿಟ್ಟಾಗಿ ಪಾಲಿಸಬೇಕಾದ, ಸಾಮಾನ್ಯ ನಿಯಮ... ಅನುಕಂಪಾಧಾರಿತ ನೇಮಕಾತಿ, ನೇಮಕಾತಿಯ ಇನ್ನೊಂದು ಪರಿಯಲ್ಲ; ಅದೊಂದು ಅಪವಾದ ಮಾತ್ರ. ಅದನ್ನು (ಉದ್ಯೋಗಾಕಾಂಕ್ಷಿಯು) ತನ್ನ ಹಕ್ಕೆಂದು ಚಲಾಯಿಸುವಂತಿಲ್ಲ. ಮೃತ ಉದ್ಯೋಗಿಯ ಕುಟುಂಬ, ತನ್ನ ಜೀವನ ನಡೆಸಲು ಪರ್ಯಾಪ್ತ ಸಾಧನವಿಲ್ಲದೆ ಅಶಕ್ತವಾದಾಗ ಮಾತ್ರ (ಈ ಅಪ ವಾದದಡಿ) ಉದ್ಯೋಗ ದೊರಕಿಸಬಹುದು.’’ ಎಂಬುದು ಈ ತೀರ್ಪಿನ ಸಾರ.
ಈ ಮೊಕದ್ದಮೆಯಲ್ಲಿ, ಉತ್ತರ ಪ್ರದೇಶದಲ್ಲಿ ಕಾರ್ಯವೆಸಗುತ್ತಿದ್ದ ಕೇಂದ್ರ ಸರಕಾರದ ಉದ್ಯೋಗಿಯೊಬ್ಬ, ತನ್ನ ಮಡದಿ, 20 ಮತ್ತು 19 ವರ್ಷದ ಇಬ್ಬರು ಪುತ್ರರನ್ನು, ಮತ್ತು 17 ವರ್ಷದ ಪುತ್ರಿಯನ್ನಗಲಿ, 2001ರಲ್ಲಿ ಮರಣಿಸಿದ. ಈ ಪುತ್ರರಲ್ಲಿ ಒಬ್ಬ, ತನ್ನ ತಂದೆ ಕಾರ್ಯವೆಸುಗುತ್ತಿದ್ದ ಇಲಾಖೆಯಲ್ಲಿ ಅನುಕಂಪಾಧಾರಿತ ನೌಕರಿ ಪಡೆಯಲು ಅರ್ಜಿ ಸಲ್ಲಿಸಿದ. ಆದರೆ ಇಲಾಖೆ (ಆಗಿನ ನಿಯಮಾನುಸಾರ) ಮೃತ ಉದ್ಯೋಗಿಯ ಕುಟುಂಬದ ವಾರ್ಷಿಕ ಆದಾಯ ಮೂರು ಲಕ್ಷ ರೂಪಾಯಿ ಮೀರಿದ್ದು ದರಿಂದ (ಅದರ ಆದಾಯ, ಪಿಂಚಣಿಯನ್ನು ಹೊರತುಪಡಿಸಿ, ರೂಪಾಯಿ 4.4 ಲಕ್ಷವಾ ಗಿತ್ತು) ಆತನ ಅರ್ಜಿಯನ್ನು ತಿರಸ್ಕರಿಸಿತು. ಇದನ್ನು ಪ್ರಶ್ನಿಸಿದ ಪುತ್ರನ ಅರ್ಜಿ ಸರ್ವೋಚ್ಚ ನ್ಯಾಯಾಲಯ ವನ್ನು ತಲುಪಿದಾಗ, ಮೇಲಿನ ತೀರ್ಪು ಹೊರ ಬಿದ್ದಿತು.
ಇಲ್ಲಿ ಒಂದು ಮಾತನ್ನು ಹೇಳುವುದು ಅಗತ್ಯ. ಯಾವುದೇ ನಿಯಮದ ಪ್ರಾಮಾ ಣಿಕ ಪಾಲನೆಯ ಹಿಂದೆ ಅದನ್ನು ಅನುಷ್ಠಾನಗೊಳಿಸುವ ಅಧಿಕಾರಿಗಳ ಮತ್ತು ಅದರ ಲಾಭ ಪಡೆಯುವ ಆಶ್ರಿತರ ನಿಷ್ಠೆಯ ಪಾತ್ರ ಮಹತ್ವದ್ದು. ಈ ನಿಷ್ಠೆಗನು ಗುಣವಾಗಿ, ಹಲವಾರು ಸಂದರ್ಭಗಳಲ್ಲಿ, ಅನುಕಂಪಾಧಾರಿತ ನೇಮಕಾತಿ ಒಂದು ‘ಲೇನ್-ದೇನ್’ ವ್ಯವಹಾರವಾಗುತ್ತದೆ. ಆಗ ಆಶ್ರಿತರ ‘ಅರ್ಹತೆ’ಯನ್ನು ನಿರ್ಧರಿಸು ವುದು ಅವರ ಲೇನ್-ದೇನ್ ವ್ಯವಹಾರದ ‘ಕ್ಷಮತೆ’. ಇಲ್ಲಿ ಯಾರು ನಿಜವಾಗಿ ಅರ್ಹರೋ ಅವರ ಅರ್ಜಿಗಳು (ಅವರು ಕೊಟ್ಟು-ಕೊಳ್ಳಲು ಅಸಹಾಯಕರಾದಲ್ಲಿ) ಕಾಲ ಮೀರುವವರೆಗೆ ಹುಡುಕಲಾರದ ಕಡತಗಳಲ್ಲಿ ಹೂತು ಹೋದರೆ, ಇನ್ನೊಂದೆಡೆ, ಅನರ್ಹ ಆಶ್ರಿತರು ಅರ್ಹರೆಂದು ದೃಢೀಕರಿಸಲ್ಪಟ್ಟು ನೌಕರಿ ಪಡೆಯುತ್ತಾರೆ.
ಸರಕಾರಿ ನೌಕರಿ ಪಡೆಯಲು ಈ ನೇಮಕಾತಿಯನ್ನು ಉಪಮಾರ್ಗ (ಶಾರ್ಟ್ಕಟ್)ವನ್ನಾಗಿ ಬಳಸಿದ ಉದಾಹರಣೆಗಳು ಸಾಕಷ್ಟಿವೆ.ಸರಕಾರಿ ಸವಲತ್ತು ಪಡೆಯಲು ಅನರ್ಹರು ಸಲ್ಲಿಸುವ ಸುಳ್ಳು ಪರಿಶಿಷ್ಟ ಜಾತಿ/ಪಂಗಡದ ಪ್ರಮಾಣ ಪತ್ರ, ಬಿಪಿಎಲ್ ರೇಷನ್ ಕಾರ್ಡ್ಗಾಗಿ ಸಲ್ಲಿಸುವ ಆದಾಯ ಪ್ರಮಾಣ ಪತ್ರ, ಇತ್ಯಾದಿಗಳಂತೆ ಅನುಕಂಪಾಧಾರಿತ ನೇಮಕಾತಿಯೂ ತನ್ನ ನೈಜ ಉದ್ದೇಶದಲ್ಲಿ ಸೋತರೆ ಅದೊಂದು ದುರಂತವೇ ಸರಿ.
ಈ ನಿಟ್ಟಿನಲ್ಲಿ, (ಮೇಲಿನ ಮೊಕದ್ದಮೆಯ ಪುತ್ರನ ಅರ್ಜಿಯನ್ನು ತಿರಸ್ಕರಿಸಿದ ಸರಕಾರಿ ಇಲಾಖೆಯ ಕ್ರಮವನ್ನು ಎತ್ತಿಹಿಡಿದು)ಅನುಕಂಪಾಧಾರಿತ ನೇಮಕಾತಿ ಉದ್ಯೋಗಾಕಾಂಕ್ಷಿಯ ಹಕ್ಕಲ್ಲವೆಂಬುದನ್ನು ದೃಡೀಕರಿಸಿದ ಸರ್ವೋಚ್ಚ ನ್ಯಾಯಾಲಯದ ತೀರ್ಪು ಸ್ವಾಗತಾರ್ಹ ಮತ್ತು ಅಂತಹ ನೇಮಕಾತಿಯಲ್ಲಿ ನಡೆಯುವ ಅವ್ಯವಹಾರವನ್ನು ತಡೆಯಲು ಸಹಕಾರಿ.
ಉತ್ತರ ಪ್ರದೇಶದ ವಾರಣಾಸಿಯಲ್ಲಿ ಹದಿನಾಲ್ಕು ವರ್ಷದ ಹುಡುಗಿ ಮತ್ತು ಮೂರು ವರ್ಷದ ಹುಡುಗ ಹಸಿವಿನಿಂದಾಗಿ ಬರ್ಬರ ಸಾವನ್ನಪ್ಪಿದ್ದಾರೆ. ನಾಝ್ರಾ ಖಾತೂನ್ ಎನ್ನ ...
Click here to post your views ಎಲ್ಲೋ ಸಿದ್ದರಾಮನ ಹುಂಡಿಯಲ್ಲಿದ್ದ ಬಡ ಕುರುಬ ಹುಡುಗನೊಬ್ಬ ರಾಜ್ಯದ ಮುಖ್ಯಮಂತ್ರಿಯ ...
ಬುದ್ಧನಿಗೆ ಜ್ಞಾನೋದಯ ಹೇಗಾಯಿತು?
ಸಿದ್ದಾರ್ಥ ಜನಿಸುವ ಮುನ್ನ ಆತನ ತಾಯಿ ರಾಣಿ ಮಹಾಮ ...
ಕಳೆದ ಒಂದು ವಾರದಿಂದ ಸ್ವಾತಂತ್ರ, ಪ್ರಜಾಪ್ರಭುತ್ವ, ಜಾತ್ಯತೀತತೆ ಮತ್ತು ಮತದಾನ ಕುರಿತು ಯ ...
ಭಾರತ ದೇಶಕ್ಕೆ ತನ್ನದೇ ಆದ ಭವ್ಯ(?) ಪರಂಪರೆ, ಇತಿಹಾಸ, ಸಂಸ್ಕೃತಿ, ಧಾರ್ಮಿಕ ತಳಹದಿ, ಆಧ್ಯಾತ್ಮಿಕ ಚ ...
ಶಿಕ್ಷಣತಜ್ಞ ಮತ್ತು ಚಿಂತಕ ಸಿ.ಎಚ್.ಕೃಷ್ಣಶಾಸ್ತ್ರಿ ಬಾಳಿಲ ಅವರ ವಿಪ್ರ ಜಾಗೃತಿ ಸಮ್ಮೇಳನದ ಫಲಶ ...
ಪರಿಶಿಷ್ಟ ಜಾತಿಯ ನಲ್ಕೆ ಸಮುದಾಯದ ಮಹಿಳೆ ಮುತ್ತು ಅವರು 1999ರಲ್ಲಿ ತೆಂಕಮಿಜಾರು ಗ್ರಾಮಪಂಚಾಯತ್ ವ ...
ಊರಿನಲ್ಲಿದ್ದಾಗ ಪೂಜೆ ಮಾಡುತ್ತಿದ್ದದ್ದು ವಿಚಿತ್ರ ಅನಿಸುತ್ತಿತ್ತು. ಅವಳು ರಾತ್ರ ...
ಮಾನ್ಯರೆ,
ಪ್ರಶ್ನೆ ಪತ್ರಿಕೆಗಳಲ್ಲಿ ದೋಷಗಳನ್ನು ನೀಡುವ ತನ್ನ ಸಂಪ್ರದಾಯವನ್ನು ಪಿಯುಸಿ ಮಂಡಳಿಯ ...