ಭಾರತದ ಸರಕಾರಗಳು ಕೊಳೆತು ನಾರುತ್ತಿವೆ. ಇದನ್ನು ಸುಸ್ಥಿತಿಗೆ ತರಲು ಸಾಧ್ಯವೆ? ಸರಕಾರಗಳು ಧಿಕ್ಕೆ ಇಲ್ಲದಂತಾಗಿವೆ. ಅವು ಜನಪರವಾಗಿಲ್ಲ. ಅಧಿಕಾರಗಳ ಪರವಾಗಿವೆ. ಜನರ ಸುಖ ಸಂತೋಷದ ಬದಲಾಗಿ ಅಧಿಕಾರಿಗಳ ಐಷಾರಾಮಗಳ ಪರವಾಗಿ ಅವು ಸಂಕಲ್ಪ ತೊಟ್ಟಂತಿವೆ ಎಂದು ಸಮಾಜವಾದಿ ನಾಯಕ 50 ವರ್ಷಗಳ ಬಗ್ಗೆ, ಅಂದಿನ ಸರಕಾರಗಳ ಬಗ್ಗೆ ಬರೆದಿದ್ದರು. ಆಗ ನೆಹರೂ ಪ್ರಧಾನ ಮಂತ್ರಿ, ನಿಜಲಿಂಗಪ್ಪ ಅಂಥವರು ಮುಖ್ಯಮಂತ್ರಿಗಳು. ಜನ ಏನೆಂದುಕೊಂಡರು ಎಂದು ಅಧಿಕಾರದಲ್ಲಿದ್ದವರು ಹೆದರುತ್ತಿದ್ದ ಕಾಲವದು. ಆಗಲೇ ಲೋಹಿಯಾಗೆ ವ್ಯವಸ್ಥೆಯ ಬಗ್ಗೆ ರೋಸಿ ಹೋಗಿತ್ತು. ಆದರೆ ಈಗ ಅವರು ಬದುಕಿದ್ದರೆ ಖಂಡಿತ ಇದನ್ನು ರಿಪೇರಿ ಮಾಡಲು ಸಾಧ್ಯವಿಲ್ಲವೆಂದು ರಿಪೇರಿಗಾಗಿ ದಾರಿ ಹುಡುಕುತ್ತಿದ್ದರು.ಮೊನ್ನೆ ಕೇಂದ್ರ ಗೃಹ ಸಚಿವ ಪಿ.ಚಿದಂಬರಂ ನೀಡಿದ ಹೇಳಿಕೆ ನೋಡಿ ಒಮ್ಮೆಲೆ ಅಂದಿನ ಲೋಹಿಯಾ , ಎ.ಕೆ.ಜಿ. ನೆನಪಿಗೆ ಬಂದರು. ಬೆಲೆಯೇರಿಕೆ ಬಗ್ಗೆ ಮಾತನಾಡುತ್ತಿದ್ದ ಚಿದಂಬರಂ ನೀರಿನ ಬಾಟಲಿಗೆ 15 ರೂ., ಐಸ್ಕ್ರೀಮ್ಗೆ 20 ರೂ. ಖರ್ಚು ಮಾಡಲು ಸಾಧ್ಯವಾಗುವುದಾದರೆ ಅಕ್ಕಿ ಅಥವಾ ಗೋಧಿಯ ಧಾರಣೆಯನ್ನು ಕೇವಲ 1 ರೂ. ಹೆಚ್ಚಿಸಿದಾಗ ಏಕೆ ಗುಲ್ಲೆಬ್ಬಿಸುತ್ತಾರೆ.
ಈ ಮಹಾಶಯ ಪ್ರಶ್ನಿಸಿದರು. ಈ ಮಾತು ಕೇಳಿ ಬ್ರೆಡ್ ಸಿಗದಿದ್ದರೆ ಕೇಕ್ ತಿನ್ನಲಿ ಎಂದು ಪ್ರೆಂಚ್ ಕ್ರಾಂತಿಯ ಮೊದಲು ರಾಣಿ ಮೇರಿ ಅಂಟೊಯ್ನೆಂಟ ಉದ್ಗರಿಸ ದಳೆಂದು ಹೇಳಲಾಗುವ ಮಾತು ಕೂಡ ನೆನಪಿಗೆ ಬಂತು.ಇದೇ ಸಂದರ್ಭದಲ್ಲಿ ಕರ್ನಾಟಕದ ಇಬ್ಬರು ಮಂತ್ರಿಗಳು ನೀಡಿದ ಅವಿವೇಕದ ಹೇಳಿಕೆ ನೋಡಿ ರೋಷ ಹೋಯಿತು. ಮೊದಲನೆಯದಾಗಿ ಮುರುಗೇಶಿ ನಿರಾಣಿ ಈ ರಾಜ್ಯದ ಕೈಗಾರಿಕಾ ಸಚಿವ, ಸ್ವತಃ ಸಕ್ಕರೆ ಕಾರ್ಖಾನೆ ನಡೆಸುವ ಈತ ರೈತರ ಭೂಮಿಯನ್ನು ಉದ್ಯಮದ ಹೆಸರಿನಲ್ಲಿ ಸ್ವಾಧೀನಪಡಿಸಿಕೊಂಡು ಕಾರ್ಪೊರೇಟ್ ಕಂಪೆನಿಗಳ ಮಡಲಿಗೆ ಹಾಕುವಲ್ಲಿ ಮಹಾನಿಸ್ಸೀಮ.
ಭೀಕರ ಬರಗಾಲದಿಂದ ತತ್ತರಿಸಿರುವ ಹೈದರಾಬಾದ್ ಕರ್ನಾಟಕದ ಕೊಪ್ಪಳಕ್ಕೆ ಇತ್ತೀಚೆಗೆ ಭೇಟಿ ನೀಡಿದ ನಿರಾಣಿ ಅಲ್ಲಿನ ಜನ ಗುಳೆ ಹೋಗುತ್ತಿದ್ದಾರೆ ಎಂದು ಪತ್ರಕರ್ತರು ಪ್ರಸ್ತಾಪಿಸಿದಾಗ, ಗುಳೆ ಹೋಗುವುದು ಕೊಪ್ಪಳದ ಜನತೆಗೆ ಚಟವಾಗಿದೆಯೆಂದು ಹೇಳಿಬಿಟ್ಟ. ಪ್ರತಿ ಬಾರಿ ಬರಗಾಲ ಬಂದಾಗ ಉತ್ತರ ಕರ್ನಾಟಕದ ರಾಯಚೂರು, ಬಿಜಾಪುರ, ಕೊಪ್ಪಳ, ಗುಲ್ಬರ್ಗಗಳಿಂದ ಸುಮಾರು ಕುಟುಂಬಗಳು, ಗೋವ, ಮುಂಬೈ, ಬೆಂಗಳೂರಿಗೆ ಗುಳಿ ಹೋಗುತ್ತವೆ. ಸಣ್ಣಪುಟ್ಟ ಮಕ್ಕಳು ಮರಿಗಳನ್ನು ಕಟ್ಟಿಕೊಂಡು ಗಂಟು ಗದಡಿ ಹೊತ್ತುಕೊಂಡು ಪ್ಯಾಸೆಂಜರ್ ರೈಲುಗಳಲ್ಲಿ ಹೊರಡುವ ಈ ಜನ ನಗರಗಳಿಗೆ ಬಂದಾಗ ನೆಲೆಸಲು ಜಾಗವಿಲ್ಲದೆ ಕೊಳಚೆ ಪ್ರದೇಶಗಳ ಮೊರೆ ಹೋಗುತ್ತಾರೆ.
ಅಲ್ಲೂ ಜಾಗ ಸಿಗುವುದಿಲ್ಲ. ಕಟ್ಟಡ ನಿರ್ಮಾಣ ಕಾಮಗಾರಿಗಳಲ್ಲಿ ಕೆಲಸಕ್ಕೆ ಸೇರಿ ನಿರ್ಮಾಣವಾಗುತ್ತಿರುವ ಕಟ್ಟಡದ ಪಕ್ಕದಲ್ಲಿ ತಗಡಿನ ಶೆಡ್ಗಳಲ್ಲಿ ಇವರು ವಾಸ ಮಾಡುತ್ತಾರೆ. ಬರುವ ಸಂಬಳ ಸಾಲದೆ ಉಪವಾಸದಿಂದ ನರಳುತ್ತಾರೆ.ಹೀಗೆ ಕೆಲಸಕ್ಕೆ ಸೇರುವ ಈ ಜನ ಮಂಗಳೂರು, ಉಡುಪಿಗಳಲ್ಲು ಇದ್ದಾರೆ. ಕಟ್ಟಡ ನಿರ್ಮಿಸುವಾಗ, ನೆಲ ಆಗೆಯುವಾಗ ಅನೇಕ ಬಾರಿ ಭೂ ಕುಸಿತ ಸಂಭವಿಸಿ ಕಟ್ಟಡ ನೆಲಕ್ಕುರುಳಿ ಸಾವಿಗಿಡಾಗುತ್ತಾರೆ. ಜನ ಇಡೀ ಕುಟುಂಬ ತಬ್ಬಲಿಯಾಗುತ್ತದೆ. ಇಂಥವರ ಬಗ್ಗೆ ಈ ನಿರಾಣಿ ಗುಳೆ ಹೋಗುವುದು ಅವರಿಗೆ ಚಟವಾಗಿದೆ ಎಂದು ಹೇಳುತ್ತಾನೆ. ಅಂದರೆ ಈತ ಮನುಷ್ಯನೋ, ಮೃಗವೋ ಗೊತ್ತಾಗಲಿಲ್ಲ. ಶಾಂತವೇರಿ ಗೋಪಾಲ ಗೌಡರರಂಥವರು ಈಗ ಇದ್ದಿದ್ದರೆ ತಮ್ಮ ಕೈಯಲ್ಲಿದ್ದ ಕೋಲಿನಿಂದ ಈತನಿಗೆ ಚೆನ್ನಾಗಿ ಬಾರಿಸುತ್ತಿದ್ದರು.
ಬಿಜೆಪಿ ಸರಕಾರದ ಇನ್ನೊಬ್ಬ ಮಂತ್ರಿ ಉಮೇಶ್ ಕತ್ತಿಯು ನಿರಾಣಿಯಂತೆ ಈತನೂ ಸಕ್ಕರೆ ಕಾರ್ಖಾನೆ ಮಾಲಕ. ಈತ ಪ್ರತಿನಿಧಿಸುವ ಬೆಳಗಾವಿ ಜಿಲ್ಲೆಯ ಬಹುತೇಕ ಪ್ರದೇಶ ಬರಪೀಡಿತವಾಗಿದೆ. ಇತ್ತೀಚೆಗೆ ಅಲ್ಲಿನ ಜಿಲ್ಲಾಧಿಕಾರಿ ಕಚೇರಿಯಲ್ಲಿ ವಿವಿಧ ಇಲಾಖೆಗಳ ಪ್ರಗತಿಪರಿಶೀಲನೆ ಸಭೆ ನಡೆಯಿತು. ನಂತರ ಸುದ್ದಿಗಾರರ ಜೊತೆಗೆ ಮಾತನಾಡುತ್ತಿದ್ದಾಗ ಬೈಲಹೊಂಗಲದ ಬಿಜೆಪಿ ಶಾಸಕ ಮೆಟಗುಡ್ ತನ್ನ ಹುಟ್ಟು ಹಬ್ಬವನ್ನು ಅದ್ದೂರಿಯಾಗಿ ಆಚರಿಸಿಕೊಂಡರು. ಬರಗಾಲದಲ್ಲಿ ಈ ಅದ್ದೂರಿ ಆಚರಣೆ ಸರಿಯೇ ಎಂದು ಪತ್ರಕರ್ತರು ಪ್ರಶ್ನಿಸಿದರು. ಆಗ ಈ ಕತ್ತಿ ಬರಗಾಲದಾಗ ಮದುವೀನು ಆಗ್ತಾವ, ಮಕ್ಕಳಾನೂ ಆಗ್ತಾವ. ಯಾವುದೂ ನಿಲ್ಲುವುದಿಲ್ಲ ಎಂದು ಉಡಾಫೆಯಿಂದ ಉತ್ತರಿಸಿದರು.
ನಿಜ, ಈ ನಿರಾಣಿ ಮತ್ತು ಉಮೇಶ್ ಕತ್ತಿಗೆ ಸಾಕಷ್ಟು ಆಸ್ತಿ ಇದೆ. ಬರ ಎಂದರೆ ಅವರಿಗೆ ಗೊತ್ತಿಲ್ಲ. ತಮ್ಮ ಸಕ್ಕರೆ ಕಾರ್ಖಾನೆ ಕಬ್ಬು ಕೊಡುವ ರೈತರಿಗೆ ಟೋಪಿ ಹಾಕುವಲ್ಲಿ ಇವರಿಬ್ಬರು ನಿಸ್ಸಿಮರು. ಆದರೆ ಇವರಿಬ್ಬರು ಭಾರಿ ಸಕ್ಕರೆ ಕಾರ್ಖಾನೆ ಮಾಲಕರಲ್ಲಿ ಈ ರಾಜ್ಯದ ಮಂತ್ರಿಗಳು. ಜನತೆ ಬರಗಾಲದ ಉರಿಯಲ್ಲಿ ಬೆಂದು ಹೋಗುತ್ತಿರುವಾಗ ಈ ರೀತಿ ಹೇಳಿಕೆ ನೀಡುವುದು ಉದ್ಘಟತನವಾಗುತ್ತದೆ. ಇವರನ್ನು ಮಂತ್ರಿಗಳು ಎನ್ನುವ ಬದಲಾಗಿ ಕಂತ್ರಿಗಳು ಎಂದು ಕರೆದರೆ ಸೂಕ್ತವಾಗುತ್ತದೆ. ಹಳೆ ಮೈಸೂರು ಭಾಗದಲ್ಲಿ ಫಟಿಂಗತನದಲ್ಲಿ ತೊಡಗಿರುವ ಜನರಿಗೆ ಟೋಪಿ ಹಾಕುವ ವ್ಯಕ್ತಿಗಳಿಗೆ ಜನ ಕಂತ್ರಿಗಳೆಂದು ಕರೆಯುತ್ತಾರೆ.
ಈ ಚಿದಂಬರಂ, ನಿರಾಣಿ, ಉಮೇಶ್ ಕತ್ತಿ ಇಂಥವರು ಸರಕಾರದ ಉನ್ನತ ಸ್ಥಾನದಲ್ಲಿ ನೆನಪಿಸಿಕೊಂಡಾಗ ಎದೆ ನಡಗುತ್ತದೆ. ಸದಾ ಕಾರ್ಪೊರೇಟ್ ಕಂಪೆನಿಗಳು ದಲ್ಲಾಳಿಯಂತೆ ವರ್ತಿಸುವ ಚಿದಂಬರಂ ಎಂದೂ ಬಡತನದ ನೋವಿಗೆ ಸ್ಪಂದಿಸಿದವರಲ್ಲ. ಇನ್ನು ನಿರಾಣಿ ಮಂತ್ರಿ ಎಂಬುದನ್ನೆ ಮರೆತು ಸಕ್ಕರೆ ಕಾರ್ಖಾನೆ ಮಾಲಕರಂತೆ ವರ್ತಿಸುತ್ತಾರೆ. ಸದಾ ತನ್ನ ಕಾರ್ಖಾನೆ ಲಾಭ-ನಷ್ಟದ ಬಗ್ಗೆ ಈತನ ಚಿಂತೆ. ರಾಜಕೀಯ ಅಧಿಕಾರ ಎಂಬುದು ತನ್ನ ಕಾರ್ಖಾನೆಯ ಲಾಭಕ್ಕಾಗಿ, ಇದರ ಜೊತೆಗೆ ರೈತರ ಭೂಮಿ ವಶಪಡಿಸಿಕೊಂಡು ದೇಶ ವಿದೇಶಗಳ ಕಾರ್ಪೊರೇಟ್ ಕಂಪೆನಿಗಳ ಮಡಿಲಿಗೆ ಹಾಕುವುದೇ ಈತನ ನಿತ್ಯದ ಚಿಂತೆ. ಕತ್ತಿಯೂ ನಿರಾಣಿಗಿಂತ ಭಿನ್ನವಲ್ಲ.
ಐವತ್ತು ಅರವತ್ತರ ದಶಕದ ರಾಜಕಾರಣ ಇಷ್ಟೊಂದು ಕೆಟ್ಟಿರಲಿಲ್ಲ. ಆಗ ಉದ್ಯಮಿಗಳು, ವ್ಯಾಪಾರಿಗಳು, ತಮ್ಮ ದುಡ್ಡಿನ ಬಲದಿಂದ ಮಂತ್ರಿ, ಶಾಸಕರಾಗುವುದು ಸಾಧ್ಯವಿರಲಿಲ್ಲ. ಆಗಲೆ ಸರಕಾರಿ ಅಧಿಕಾರಿಗಳು, ಮೋಜು ಮೇಜವಾನಿ ಕಂಡು ರೋಸಿ ಹೋಗಿದ್ದ ಲೋಹಿಯಾ ಸರಕಾರಗಳು ಕೊಳೆತು ಹೋಗಿವೆ ಎಂದಿ ದ್ದರು. ಆದರೆ ಈಗ ಕೊಳೆತು ಹೋದ ಸರಕಾರಕ್ಕು ನಮ್ಮ ಜನ ಅಡ್ಜಸ್ಟ್ ಆಗಿದ್ದಾರೆ. ಕರ್ನಾಟಕ ಸಂಪುಟದಲ್ಲಿ ನಾನಾ ವಂಚನೆಯ ಹಗರಣಗಳಲ್ಲಿ ಸಿಲುಕಿ ನಿರೀಕ್ಷಣಾ ಜಾಮೀನು ಪಡೆದ ಆರು ಮಂದಿ ಮಂತ್ರಿಗಳಾಗಿದ್ದಾರೆ. ಇವರಲ್ಲಿ ಚಿಕ್ಕಮಗಳೂರಿನ ಆರೆಸ್ಸೆಸ್ ಸ್ವಯಂ ಸೇವಕ ಸಿ.ಟಿ.ರವಿಯೂ ಒಬ್ಬರು.
ಈಗಂತೂ ವ್ಯವಸ್ಥೆ ಎಷ್ಟು ಕೆಟ್ಟು ಹೋಗಿದೆ ಎಂದರೆ ಇದನ್ನು ರಿಪೇರಿ ಮಾಡಲು ಸಾಧ್ಯವೇ ಇಲ್ಲ.
ಜಾಗತೀಕರಣ, ನವ ಉದಾರೀಕರಣದ ಶಕೆ ಆರಂಭವಾದ ನಂತರ ಸಾರ್ವಜನಿಕ ಸೊತ್ತನನು ಕಬಳಿಸುವುದೇ ಅಭಿವೃದ್ಧಿಯ ಸಂಕೇತವಾಗಿದೆ. ಎಲ್ಲರ ಬಾಯಾರಿಕೆ ಹಿಂಗಿಸಬೇಕಾದ ನೀರು, ಅನ್ನ ನೀಡುವ ಭೂಮಿ, ಮಳೆ ತರುವ ಕಾಡು ಎಲ್ಲವನ್ನು ನುಂಗಲು ಕಾರ್ಪೊರೇಟ್ ಬಕಾಸುರರು ಬಾಯಿ ತೆರೆದು ನಿಂತಿದ್ದಾರೆ. ಈ ದಿನಗಳಲ್ಲಿ ನಿರಾಣಿ, ಉಮೇಶ್ ಕತ್ತಿ, ಚಿದಂಬರಂರಂಥವರು ಅಧಿಕಾರದ ಅಟ್ಟಹಾಸದಿಂದ ಮೆರೆಯುತ್ತಾರೆ.
ಭಾರತಕ್ಕೆ ಅಂತಾರಾಷ್ಟ್ರೀಯ ಮಟ್ಟದ ಮ್ಯಾನ್ ಬೂಕರ್ ಪ್ರಶಸ್ತಿ ಕೂದಲೆಳೆಯಲ್ಲಿ ಕೈ ತಪ್ಪಿತು. ಅಮೆರಿಕದ ಹಿರಿಯ ಬರಹಗಾರ್ತಿ ಲಿಡಿಯಾ ಡೇವಿಸ್ ಈ ಪ್ರಶಸ್ತಿಯನ್ನ ...
Click here to post your views ಜನ ಸಂಖ್ಯೆಯ ಅರ್ಧದಷ್ಟಿರುವ ಮಹಿಳೆಯರ ಸ್ವಾವಲಂಬನೆಗೆ ಸೂಕ್ತವಾದ ಕಾರ್ಯಗಳನ್ನು ರೂಪಿಸಬೇಕ ...
ಸಿದ್ದರಾಮಯ್ಯ ಹೊಸ ಕನಸಿನ ಆಸೆ ಬಿತ್ತಿದ್ದಾರೆ. ಅವರ ಹೊಣೆಗಾರಿಕೆ ಹೆಚ್ಚಾಗಿದೆ. ದೇವರಾಜ ...
ನನ್ನ ಅತ್ತಿಗೆ (ಅಂದರೆ ಹಿರಿಯ ಕವಿ, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ, ಉಳ್ಳಾಲದ ...
ಎಲ್ಲೋ ಸಿದ್ದರಾಮನ ಹುಂಡಿಯಲ್ಲಿದ್ದ ಬಡ ಕುರುಬ ಹುಡುಗನೊಬ್ಬ ರಾಜ್ಯದ ಮುಖ್ಯಮಂತ್ರಿಯ ...
ಬುದ್ಧನಿಗೆ ಜ್ಞಾನೋದಯ ಹೇಗಾಯಿತು?
ಸಿದ್ದಾರ್ಥ ಜನಿಸುವ ಮುನ್ನ ಆತನ ತಾಯಿ ರಾಣಿ ಮಹಾಮ ...
ಕಳೆದ ಒಂದು ವಾರದಿಂದ ಸ್ವಾತಂತ್ರ, ಪ್ರಜಾಪ್ರಭುತ್ವ, ಜಾತ್ಯತೀತತೆ ಮತ್ತು ಮತದಾನ ಕುರಿತು ಯ ...
ಭಾರತ ದೇಶಕ್ಕೆ ತನ್ನದೇ ಆದ ಭವ್ಯ(?) ಪರಂಪರೆ, ಇತಿಹಾಸ, ಸಂಸ್ಕೃತಿ, ಧಾರ್ಮಿಕ ತಳಹದಿ, ಆಧ್ಯಾತ್ಮಿಕ ಚ ...
ಶಿಕ್ಷಣತಜ್ಞ ಮತ್ತು ಚಿಂತಕ ಸಿ.ಎಚ್.ಕೃಷ್ಣಶಾಸ್ತ್ರಿ ಬಾಳಿಲ ಅವರ ವಿಪ್ರ ಜಾಗೃತಿ ಸಮ್ಮೇಳನದ ಫಲಶ ...